ಅಭಿಮಾನಿ

ಬಂತೊಂದು ಹೊಸ ವರುಷ

Posted by: sundaranadu on: December 31, 2009

ಹಳೆದು ಬಸವಳಿದು
ಕಳೆದೋಯಿತೊಂದು ವರುಷ
ನಲಿದು ನೆಗೆನೆಗೆದು
ಬಂತೊಂದು ಹೊಸ ವರುಷ
 
ಅಂತೆ-ಕಂತೆಯೆಲ್ಲ
ಏಕೆ ಬೇಕು ಬಾಳಲಿ
ಚಿಂತೆ-ಗಿಂತೆಯೆಲ್ಲ
ಮರೆತು ಬಾಳು ಹಸನಾಗಲಿ
 
ಕಂಡ ಕನಸುಗಳು
ನೂರು ಇವೆ ಜೊತೆಯಲಿ
ನಮ್ಮ ಮನಸುಗಳು
ದುಡಿದು ಕನಸೆಲ್ಲ ನನಸಾಗಲಿ
 
ವರುಷವಿಡಿ ಇರಲಿ
ಎಲ್ಲ ನಲಿದಾಡೋ  ಸಂಭ್ರಮ
ನೋವುಗಳೆಲ್ಲ ಮರೆಯಲಿ
ಸುಖಿಸುತ ಆರೋಗ್ಯ ಕ್ಷೇಮ
 
ಹೊಸ ವರುಷವೊಂದು
ಕೋರುತಿದೆ ನಿಮಗೆ ಶುಭಾಶಯ
ವರುಷದ ಹರ್ಷವೊಂದು
ಕಾಯುತಿದೆ ನಿಮ್ಮನ್ನೇ ಮಹಾಶಯ

ಮೌನವೇ ಮಾತಾಗಿ

Posted by: sundaranadu on: December 14, 2009

ನಡೆದು ಬಾ ಬಳಿಗೆ
ಸುಮ್ಮನೆ ಹಾಗೆ
ಮಾತೊಂದು ಆಡಬೇಡ
ನಗುವೊಂದಿರಲಿ ಜೊತೆಗೆ
 
ಕಣ್ಣುಗಳೇ ಮಾತಾಡುವಾಗ
ಬೇರೆ ಮಾತೇಕೆ ಈಗ
ಮೌನದಿ ಹೃದಯದ ಭಾಷೆ
ಕೇಳಲು ಎಂಥ ಸೊಗಸೆ
 
ಪ್ರೀತಿಯ ಮೂಟೆ ಹೊತ್ತು
ಅದರಲಿ ಸಾವಿರ ಕನಸನಿತ್ತು
ಜೊತೆ ಬಾರೆ ಮೆಲ್ಲಗೆ
ಮೌನದ ಆಭರಣ ಇರಲಿ ತೆಳ್ಳಗೆ
 
ಮೌನದಿ ಬೇಡ ಮಾತಿನ ಮೋಹ
ಆರದು ಎಂದು ಪ್ರೀತಿಯ ದಾಹ
ನೀನಿರದ ಸನಿಹ
ಭರಿಸಲಾಗದು ವಿರಹ

ನೆರೆ ಹೊರೆ

Posted by: sundaranadu on: December 10, 2009

 

ನೆಲ ಬಿರಿದಿತ್ತು
ಕಾಣಲೊಂದು ಹುಲ್ಲು ಇರಲಿಲ್ಲ
ಮೈಯನ್ನೆ ಸುಡುವ ಬಿಸಿಲು
ಸ್ವಚ್ಛ ನೀಲಿ ಆಕಾಶದ ಹೊರತು
ಜೀವ ತಣಿಸೋ
ಮಳೆಯ ಮೋಡಗಳಿರಲಿಲ್ಲ

ರೈತ ಆಕಾಶಕೆ ಕೈ ಮುಗಿದಾಯಿತು
ತಲೆ ಮೇಲೆ ಕೈ ಹೊತ್ತು ಕೂರಬೇಕಾಯಿತು
ಊರದೇವರ ಜಾತ್ರೆಯಾಯಿತು
ಕಪ್ಪೆಗಳ ಮದುವೆಯಾಯಿತು
ಇಲ್ಲ ಇಲ್ಲ
ಒಂದೇ ಒಂದು ಹನಿ ಮಳೆಯಾಗಲಿಲ್ಲ

ಎಲ್ಲೆಡೆ ನಿಟ್ಟುಸಿರು
ಸಾಲದ ಕರಿನೆರಳು
ಸಾವಿಗೆ ಶರಣಾಯಿತು ಜೀವ
ಬಿರಿದ ಹೊಲದಲ್ಲಿ ವಿಷ ಕುಡಿದ ದೇಹ
ಒಣಗಿದ ಮರದಲ್ಲೂ ನೇತಾಡಿತು ಜೀವ
ಕಣ್ಣೀರೊಂದೇ ಕಾಣಬೇಕಾಯಿತು

ಅದೊಂದು ಮಳೆ
ಎಲ್ಲಿ ಅಡಗಿತ್ತೋ
ಭುವಿ-ಬಾನು ಒಂದಾಗುವಂತೆ ಗುಡುಗಿತು
ಅಬ್ಬಾ! ಅದೇನು ಮಳೆಯೋ?
ನೆಲ-ಜನ-ಪ್ರಾಣಗಳೆಲ್ಲ ಅಯೋಮಯ
ನೀರು-ನೀರೆಂದು ಹಾತೊರೆದವರ
ಮನೆಯೇನು, ಪ್ರಾಣವು ನಡುಗಿತು

ನೊಂದ ಮನದ ಆಕ್ರಂದನಕೆ
ಹಲವು ಹೃದಯಗಳು ಮಣಿದವು
ತುಂಬಿದ ಹೊಳೆಯಂತೆ ಹರಿದಿತು
ನೆರವಿನ ಮಹಾಪೂರ
ನವಗ್ರಾಮಗಳ ನಿರ್ಮಾಣಕೆ
ಬುನಾದಿ ಹಾಕಿದರು ಹಲವರು

ಇಚ್ಚಾಶಕ್ತಿ ಮೆರೆಯಲಿ ಮೇಲಾಗಿ
ದುಡಿಯಲಿ ಎಲ್ಲ ಸಕ್ರಿಯವಾಗಿ
ನೊಂದವರ ಕಣ್ಣೀರು ಒರೆಸಲಿ
ರಾಜ್ಯವಾಳುವ ಕೈಗಳು
ನಲುಗಿದವರು ಮತ್ತೊಮ್ಮೆ ನಸುನಗಲಿ
ಹಸಿದವರ ಬದುಕು ಹಸನಾಗಲಿ

ಕನ್ನಡ ಚುಟುಕಗಳು-೨

Posted by: sundaranadu on: December 2, 2009

೧. ಇವಳ ನೋಡುತಲಿದ್ದರೆ
 ವರ್ಷಗಳು ನಿಮಿಷದಂತೆ ತೋರುವವು
ಇವಳು ಅಲಂಕಾರಕೆ ನಿಂತರೆ
ನಿಮಿಷಗಳೆಲ್ಲಿ ವರ್ಷಗಳೇ ಬೇಕಾಗುವವು
 
೨. ನಾನು ಸದಾ ಒಂಟಿ ಸಂಚಾರಿ
ಏಕೆಂದರೆ
ನನ್ನವಳ ಜೊತೆಗೆ ಹೊರಟರೆ
ಜೇಬಿಗೆ ಖಂಡಿತ ಕತ್ತರಿ

ನಡುಗುತಿದೆ ಇವನ ನಡೆಗೆ

Posted by: sundaranadu on: November 12, 2009

ಹೆದರಿಕೆ ಶುರುವಾಗಿದೆ
ಯಾಕೋ ಅಮಾವಾಸ್ಯೆಗೆ
ತನ್ನೊಡಲ ಕಗ್ಗತ್ತಲಿನಲೂ
ಸಾಗುವ ಖದೀಮರ ನಿರ್ಭೀತ ನಡೆಗೆ

ಹಣವು ಅಳುತಲಿದೆ
ಹೆಣವು ಅಂಜಿದೆ
ಹಣಕಾಗಿ ಹೆಣವನ್ನು ಕದ್ದೊಯ್ಯುವ
ಲೋಭಿಗಳ ಹಾಳು ನಡೆಗೆ

ಭೂಮಿಯು ನಡುಗುತಿದೆ
ಕಾಡೆಲ್ಲೋ ಮರೆಯಾಗುತಿದೆ
ಕಾಸಿಗಾಗಿ ಮಣ್ಣನು ಬಿಡದ
ಮಾನವನ ಅತಿಆಸೆಯ ನಡೆಗೆ

ನೀರೆಲ್ಲ ನಾಪತ್ತೆ
ಉಸಿರೆಲ್ಲ ವಿಷವಂತೆ
ನೀರಲ್ಲೂ, ಉಸಿರಲ್ಲೂ ವಿಷವ ಹರಡೋ
ದಾನವ ರೂಪಿಯ ನಡೆಗೆ

ನಡುಗುತಿದೆ ಇವನ ನಡೆಗೆ
ಭುವಿ-ಬಾನೆಲ್ಲ
ಮೂಕವಾಗಿಯ ನೋಡುತಿದೆ
ಕಾಯುತ ಕಾಲ

ಅಂಚೆ ಚೀಟಿಯಲ್ಲಿ ಕನ್ನಡಿಗರು

Posted by: sundaranadu on: November 6, 2009

Anche cheetiyalli Kannadigaru

ಅಂಚೆ ಚೀಟಿಯಲ್ಲಿ ಕನ್ನಡಿಗರು

ಇಂಥ ಒಂದು ಸುಂದರವಾದ, ಸರಳವಾದ ಅಂಕಣವನ್ನು ನೀಡಿದ್ದಕ್ಕೆ ಕನ್ನಡಪ್ರಭ ಪತ್ರಿಕೆಗೆ ಧನ್ಯವಾದಗಳು.
ಎಲ್ಲೆಡೆ ಕನ್ನಡ ಉಳಿಯಲಿ, ಬೆಳೆಯಲಿ ಮತ್ತು ಹರಡಲಿ.
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

ನಿಮ್ಮ ಅಭಿಮಾನಿ,
ರಾಜಣ್ಣ

ನೀನಿಲ್ಲದಿರೆ ನಾನೆಲ್ಲಿ

Posted by: sundaranadu on: October 26, 2009

ನಿನ್ನೊಡನೆ
ಮಾತಾಡಲು
ಗುದ್ದಾಡಲು
ಮುದ್ದಾಡಲು
ಬಯಸುತಿದೆ ಮನಸು
ತೋರದಿರು ಮುನಿಸು
ಮರದಂತೆ ನೀನು
ಪಾದದಡಿಯ ಬಳ್ಳಿ ನಾನು
ನಿನ್ನ ನೋಡುತಲೇ
ಹಬ್ಬುವೆನು
ನಿನ್ನ ತೋಳ್ತೆಕ್ಕೆಯಲಿ
ಉಬ್ಬುವೆನು
ನನ್ನ ಉಸಿರಿಂದು
ನಿನ್ನ ಕೈಯಲ್ಲಿ
ನೀನಿಲ್ಲದಿರೆ
ನಾನೆಲ್ಲಿ

Tags:

ಪ್ರೀತಿಯರಮನೆ

Posted by: sundaranadu on: October 9, 2009

ಹೇ ಸಖಿ
ನೋಡುತಲಿದ್ದೆ
ಅನುದಿನವೂ, ಅನುಕ್ಷಣವೂ
ಅನುರಾಗವು
ಎಂದೋ ಮೊಳೆದಿತ್ತು
ನನ್ನ ಕಣ್ಣೋಟವೂ
ನಿನಗೂ ತಿಳಿದಿತ್ತು
 
ಮುಷ್ಟಿ ಗಾತ್ರದ ಹೃದಯದ
ತುಂಬೆಲ್ಲ ನೀನಿದ್ದೆ
ಅದಾಗಿತ್ತು
ನಿನ್ನದೆ ಅರಮನೆ
ನನ್ನದೇ ಪ್ರೀತಿಯ
ತಂಗಾಳಿ ಬೀಸುತಲಿದ್ದೆ
ನಿನ್ನಯ ಮನ ತಣಿಯಲು
 
ಕಾಣದ ಕೈಯೊಂದು
ಕಾಡುತಲಿತ್ತು
ನಮ್ಮಯ ಅನುದಿನದ ಪ್ರೀತಿಯ
ನನ್ನ ಪ್ರೀತಿಯ ತಂಗಾಳಿಗೆ
ವಿಷ ಉಣಿಸಿ
ಪ್ರೀತಿಯರಮನೆಯ ಬರಿದು ಮಾಡಿತು
ಬದುಕು ಮಸಣವಾಯಿತು ಇಂದು

ಇರುಳು

Posted by: sundaranadu on: October 9, 2009

ಕತ್ತಲೆಯೊಳು ಮುಳುಗುತಿಹುದು
ಈ ಜಗವ ಬೆಳಗಿದ ಸೂರ್ಯ
ಬೆಳದಿಂಗಳ ಹುಣ್ಣಿಮೆಯೂ
ಇನ್ನಿಲ್ಲ
ಅಮಾವಾಸ್ಯೆ, ಎಲ್ಲೆಲ್ಲೂ ಆವರಿಸಿದೆ
ಬರ-ನೋವು-ಸಾವಿನ
ಕರಿನೆರಳಿನ ಅಟ್ಟಹಾಸ
ಎಲ್ಲರೆದೆಯಲ್ಲು ಪ್ರೀತಿ, ಜ್ಞಾನ
ಕರುಣೆ ತುಂಬುವವರೆಗೂ
ಕಳೆಯದು ಈ ಇರುಳು

ಈ ಸೌಂದರ್ಯಕೆ

Posted by: sundaranadu on: August 16, 2009

ಕೆನ್ನೈದಿಲೆಯ ಹುಡಿ ಮಾಡಿ
ಚಂದ್ರನ ಬೆಳದಿಂಗಳ ಹಾಲ ಮಾಡಿ
ಕಲಸಿ ಮಾಡಿದ ಮೊಗ
ಕಡು ಅನ್ಧಕಾರದಲು
ಮಿನುಗುವುದು ಜಗ-ಮಘ

ಜಿಂಕೆಗಳ ಕೊಂದು
ಕಣ್ಣಿಟ್ಟನೊ ಬ್ರಹ್ಮ
ಈ ಸೌಂದರ್ಯಕೆ
ಅಲ್ಲಲ್ಲಿ ಸುಳಿಯುವ
ಹೂವ ಮುಂಗುರುಳು

ಹಂಸಗಳ ವಧೆ ಮಾಡಿ
ರೆಕ್ಕೆಗಳ ಕೊಯ್ದು ತಂದು
ಮಾಡಿದನೆ ಬ್ರಹ್ಮ
ಚೆಲುವೆಯ ಕಣ್ರೆಪ್ಪೆಗಳ

ಹೂವ ಮಕರಂಧವನೆಲ್ಲ
ಕೂಡಿಸಿ
ಹಾಲ ನೊರೆಯಿಂದ ಮುಳುಗಿಸಿ
ಹೆಣೆಯಿತೇ ಬೊಮ್ಮನ ಕೈಗಳು
ಸವಿಯ ಚೆನ್ದುಟಿಯ

ಹಾಲ ಕೊಳದಿ ಬೆಳೆದ
ಕೆಂಪು ಕಮಲವ ಆಯ್ದು ತಂದು
ಜೇನು ಗಂಧಗಳ ಬೆರೆಸಿ
ಅರೆದು ಮಾಡಿದನೆ
ಸೌಗಂಧದ ಚೆಲುವ ಮೈ ಸಿರಿಯ

ಈ ಚೆಲುವೆ
ಕೈ ಯಾಡುವೆಡೆ
ಬಿರುಗಾಳಿ ತಂಗಾಳಿ ಯಾಗುವುದು
ಇವಳು ನಡೆದಾಡು ವೆಡೆ
ಮರುಭೂಮಿ ಹಸಿರು ಕಾನನವಾಗುವುದು

ನಿನ್ನ ಸೌಂದರ್ಯಕೆ
ಪದಗಳೇ ನಿಲುಕವು
ಹಾಡಿ ಹೊಗಳಲೆಂದರೆ
ನಿನ್ನ ನೋಡುತಲೇ
ಎಲ್ಲ ಮರೆವವು

ಹೇಳೆ ಚೆಲುವೆ
ನಿನ್ನ ವರ್ಣಿಸೋ ರಸಿಕನಾರು?
ನಿನ್ನ ಸೌಂದರ್ಯಕೆ
ಸಿಲುಕುವ ಪದಗಳಾವು

All articles, poems and writings are written by myself (Sundaranadu) except Kannada SMS and Proverbs. ಇಲ್ಲಿ ಬರೆದಿರುವ ಎಲ್ಲ ಲೇಖನಗಳು, ಕವಿತೆಗಳು, ಬರಹಗಳು (ಕನ್ನಡ ಗಾದೆಗಳು ಮತ್ತು ಏಸ್ಸೆಮ್ಮೆಸ್ಸು ಹೊರತುಪಡಿಸಿ) ನನ್ನ (ಸುಂದರನಾಡು) ಸ್ವಂತದ್ದಾಗಿವೆ. ಸುಂದರನಾಡಿಗೆ ಬಂದು ಹೋದವರು Locations of visitors to this page

ಸುಂದರನಾಡಿನ ಅತಿಥಿಗಳು

  • 15,102