ಅಭಿಮಾನಿ

ಅಂಚೆ ಚೀಟಿಯಲ್ಲಿ ಕನ್ನಡಿಗರು

Posted by: sundaranadu on: November 6, 2009

Anche cheetiyalli Kannadigaru

ಅಂಚೆ ಚೀಟಿಯಲ್ಲಿ ಕನ್ನಡಿಗರು

ಇಂಥ ಒಂದು ಸುಂದರವಾದ, ಸರಳವಾದ ಅಂಕಣವನ್ನು ನೀಡಿದ್ದಕ್ಕೆ ಕನ್ನಡಪ್ರಭ ಪತ್ರಿಕೆಗೆ ಧನ್ಯವಾದಗಳು.
ಎಲ್ಲೆಡೆ ಕನ್ನಡ ಉಳಿಯಲಿ, ಬೆಳೆಯಲಿ ಮತ್ತು ಹರಡಲಿ.
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

ನಿಮ್ಮ ಅಭಿಮಾನಿ,
ರಾಜಣ್ಣ

ನೀನಿಲ್ಲದಿರೆ ನಾನೆಲ್ಲಿ

Posted by: sundaranadu on: October 26, 2009

ನಿನ್ನೊಡನೆ
ಮಾತಾಡಲು
ಗುದ್ದಾಡಲು
ಮುದ್ದಾಡಲು
ಬಯಸುತಿದೆ ಮನಸು
ತೋರದಿರು ಮುನಿಸು
ಮರದಂತೆ ನೀನು
ಪಾದದಡಿಯ ಬಳ್ಳಿ ನಾನು
ನಿನ್ನ ನೋಡುತಲೇ
ಹಬ್ಬುವೆನು
ನಿನ್ನ ತೋಳ್ತೆಕ್ಕೆಯಲಿ
ಉಬ್ಬುವೆನು
ನನ್ನ ಉಸಿರಿಂದು
ನಿನ್ನ ಕೈಯಲ್ಲಿ
ನೀನಿಲ್ಲದಿರೆ
ನಾನೆಲ್ಲಿ

Tags:

ಪ್ರೀತಿಯರಮನೆ

Posted by: sundaranadu on: October 9, 2009

ಹೇ ಸಖಿ
ನೋಡುತಲಿದ್ದೆ
ಅನುದಿನವೂ, ಅನುಕ್ಷಣವೂ
ಅನುರಾಗವು
ಎಂದೋ ಮೊಳೆದಿತ್ತು
ನನ್ನ ಕಣ್ಣೋಟವೂ
ನಿನಗೂ ತಿಳಿದಿತ್ತು
 
ಮುಷ್ಟಿ ಗಾತ್ರದ ಹೃದಯದ
ತುಂಬೆಲ್ಲ ನೀನಿದ್ದೆ
ಅದಾಗಿತ್ತು
ನಿನ್ನದೆ ಅರಮನೆ
ನನ್ನದೇ ಪ್ರೀತಿಯ
ತಂಗಾಳಿ ಬೀಸುತಲಿದ್ದೆ
ನಿನ್ನಯ ಮನ ತಣಿಯಲು
 
ಕಾಣದ ಕೈಯೊಂದು
ಕಾಡುತಲಿತ್ತು
ನಮ್ಮಯ ಅನುದಿನದ ಪ್ರೀತಿಯ
ನನ್ನ ಪ್ರೀತಿಯ ತಂಗಾಳಿಗೆ
ವಿಷ ಉಣಿಸಿ
ಪ್ರೀತಿಯರಮನೆಯ ಬರಿದು ಮಾಡಿತು
ಬದುಕು ಮಸಣವಾಯಿತು ಇಂದು

ಇರುಳು

Posted by: sundaranadu on: October 9, 2009

ಕತ್ತಲೆಯೊಳು ಮುಳುಗುತಿಹುದು
ಈ ಜಗವ ಬೆಳಗಿದ ಸೂರ್ಯ
ಬೆಳದಿಂಗಳ ಹುಣ್ಣಿಮೆಯೂ
ಇನ್ನಿಲ್ಲ
ಅಮಾವಾಸ್ಯೆ, ಎಲ್ಲೆಲ್ಲೂ ಆವರಿಸಿದೆ
ಬರ-ನೋವು-ಸಾವಿನ
ಕರಿನೆರಳಿನ ಅಟ್ಟಹಾಸ
ಎಲ್ಲರೆದೆಯಲ್ಲು ಪ್ರೀತಿ, ಜ್ಞಾನ
ಕರುಣೆ ತುಂಬುವವರೆಗೂ
ಕಳೆಯದು ಈ ಇರುಳು

ಈ ಸೌಂದರ್ಯಕೆ

Posted by: sundaranadu on: August 16, 2009

ಕೆನ್ನೈದಿಲೆಯ ಹುಡಿ ಮಾಡಿ
ಚಂದ್ರನ ಬೆಳದಿಂಗಳ ಹಾಲ ಮಾಡಿ
ಕಲಸಿ ಮಾಡಿದ ಮೊಗ
ಕಡು ಅನ್ಧಕಾರದಲು
ಮಿನುಗುವುದು ಜಗ-ಮಘ

ಜಿಂಕೆಗಳ ಕೊಂದು
ಕಣ್ಣಿಟ್ಟನೊ ಬ್ರಹ್ಮ
ಈ ಸೌಂದರ್ಯಕೆ
ಅಲ್ಲಲ್ಲಿ ಸುಳಿಯುವ
ಹೂವ ಮುಂಗುರುಳು

ಹಂಸಗಳ ವಧೆ ಮಾಡಿ
ರೆಕ್ಕೆಗಳ ಕೊಯ್ದು ತಂದು
ಮಾಡಿದನೆ ಬ್ರಹ್ಮ
ಚೆಲುವೆಯ ಕಣ್ರೆಪ್ಪೆಗಳ

ಹೂವ ಮಕರಂಧವನೆಲ್ಲ
ಕೂಡಿಸಿ
ಹಾಲ ನೊರೆಯಿಂದ ಮುಳುಗಿಸಿ
ಹೆಣೆಯಿತೇ ಬೊಮ್ಮನ ಕೈಗಳು
ಸವಿಯ ಚೆನ್ದುಟಿಯ

ಹಾಲ ಕೊಳದಿ ಬೆಳೆದ
ಕೆಂಪು ಕಮಲವ ಆಯ್ದು ತಂದು
ಜೇನು ಗಂಧಗಳ ಬೆರೆಸಿ
ಅರೆದು ಮಾಡಿದನೆ
ಸೌಗಂಧದ ಚೆಲುವ ಮೈ ಸಿರಿಯ

ಈ ಚೆಲುವೆ
ಕೈ ಯಾಡುವೆಡೆ
ಬಿರುಗಾಳಿ ತಂಗಾಳಿ ಯಾಗುವುದು
ಇವಳು ನಡೆದಾಡು ವೆಡೆ
ಮರುಭೂಮಿ ಹಸಿರು ಕಾನನವಾಗುವುದು

ನಿನ್ನ ಸೌಂದರ್ಯಕೆ
ಪದಗಳೇ ನಿಲುಕವು
ಹಾಡಿ ಹೊಗಳಲೆಂದರೆ
ನಿನ್ನ ನೋಡುತಲೇ
ಎಲ್ಲ ಮರೆವವು

ಹೇಳೆ ಚೆಲುವೆ
ನಿನ್ನ ವರ್ಣಿಸೋ ರಸಿಕನಾರು?
ನಿನ್ನ ಸೌಂದರ್ಯಕೆ
ಸಿಲುಕುವ ಪದಗಳಾವು

ಹೇಳು ನೀನು ನನಗೆ

Posted by: sundaranadu on: July 21, 2009

 

ಹಕ್ಕಿ  ಹಾಡುವ ಮುನ್ನ

ಹೇಳು ನೀನು ನನಗೆ 

ಹಾಡಿನೊಂದಿಗೆ  ಹೃದಯದ 

ಬಡಿತ ಸೇರಿಸಬೇಕಿದೆ 

ಅವಳಿಗೆ   ಪ್ರೀತಿ ತಿಳಿಸಬೇಕಿದೆ

 

ರವಿ ಮೂಡುವ  ಮುನ್ನ 

ಹೇಳು ನೀನು ನನಗೆ 

ಹಾಡೋ ಹಕ್ಕಿಯ  ಕಲೆತು 

ನಾನು ಹಾಡಬೇಕಿದೆ 

ಅವಳಿಗೆ   ಪ್ರೀತಿ ತೋರಬೇಕಿದೆ 

 

ಗಾಳಿ ಸೋಕುವ ಮುನ್ನ  

ಹೇಳು ನೀನು ನನಗೆ 

ಹೂ ಗಂಧ  ತರೋ ತಂಗಾಳಿಗೆ 

 ಪ್ರೀತಿ ಬೆರೆಸಬೇಕಿದೆ 

ಅವಳಿಗೆ  ಪ್ರೀತಿ ನೀಡಬೇಕಿದೆ 

ನಿನ್ನ ಮಾತ್ರದಿಂದಲೇ

Posted by: sundaranadu on: June 28, 2009

ನೂರು ಊರು  ಸುತ್ತಿದರೂ 

ನೂರು ದಾನ ಮಾಡಿದರೂ 

ಸಿಗಲಿಲ್ಲ ಪುಣ್ಯ  

ನಿನ್ನ ಕೈ ಹಿಡಿದ ಮಾತ್ರಕೆ 

ನಾನಾಗುವೆ  ಧನ್ಯ 

 

ಕನಕ, ಪುರಂದರ ಹಾಡಿದರೂ 

ರವಿವರ್ಮನ ಕಲೆ ಮೆರೆದರೂ 

ಸವಿಯಲಾಗಲಿಲ್ಲ ಸವಿಯ 

ನಿನ್ನ  ಕಂಡ ಮಾತ್ರಕೆ 

ಹರಿವುದು ಪ್ರೇಮಕಾವ್ಯ 

 

ಹುಟ್ಟಿನಿಂದಲೂ  ಜಗವ ಕಂಡರೇನೂ 

ಕೀರ್ತಿಶಿಖರದಲಿ ಕುಳಿತು ಮರೆದರೇನೂ 

ಸರಿಸಾಟಿಯಾಗುವುದೇ 

ನೀ ಧಾರೆ ಎರೆವ ಪ್ರೀತಿಗೆ 

ಣ್-ಮನ ಸೆಳೆವ ನಿನ್ನ  ಕುಡಿ ನೋಟಕೆ

Tags:

ವಿರಹಗೀತೆ

Posted by: sundaranadu on: June 23, 2009

ಅಂಗಳದಲಿ ತಿಂಗಳು ಇಳಿದರು
ಕಾಣಲಿಲ್ಲ ನಿನ್ನ ಕಂಗಳು
ನಿನ್ನ ವಿರಹದಲ್ಲಿಯೇ
ಬರೆದು ಬರೆದು
ಸೋತವು ನನ್ನ ಕೈಗಳು

ಹತ್ತಾರು ಪ್ರೇಮ ಪುಸ್ತಕಗಳ
ನೂರೆಂಟು ಸಾಲುಗಳ ಹೆಕ್ಕಿ ತಂದೆ
ಅಕ್ಕರೆಯಲಿ ಅಕ್ಷರವ ಜೋಡಿಸುತ
ಬಳಲಿದೆ, ಬಾಡಿ ಬೆಂಡಾದೆ
ವಿರಹಗೀತೆ ಪ್ರೇಮಗೀತೆ ಆಗದೆ
ಉಳಿದೋಯಿತು, ಹರಿದು ಕಡಲಾಯಿತು

ನೂರಾರು ಪ್ರೇಮಿಗಳ ಕಂಡು
ಮಾತಾಡಿಸಿದೆ, ಕೇಳಿ ತಿಳಿದೆ
ಹೇಗೆಂದು ನಿನ್ನ ಒಲಿಸುವುದು
ಕಥೆ, ಕವನ, ಕಾವ್ಯ
ಓದುವುದು ಬಿಟ್ಟೆ, ಸುಟ್ಟೆ
ನೀನಿಲ್ಲದೇ ಕವಿತೆಗಳೆಲ್ಲ ಜಾಳಾದವು
ಕನಸಲ್ಲು ಕಣ್ಣು ನೀರಾದವು

ಮನೆ ಬೇಕಾಗಿದೆ

Posted by: sundaranadu on: April 10, 2009

ಬಾಡಿಗೆಗೊಂದು ಮನೆ ಬೇಕಾಗಿದೆ
ಎಂದೆನ್ನಿಸಿದ ಕೂಡಲೇ
ಬೀದಿ ಬೀದಿಯಲಿ ಅಲೆದಾಡಿದೆ
ಶನಿವಾರ-ಭಾನುವಾರಗಳು
ಹತ್ತು ಹಲವಾದವು
‘ಬ್ರಹ್ಮಚಾರಿಗಳಿಗೆ ಮನೆಯಿದೆ’
ಎಂಬ ಬೋರ್ಡ್
ಕಾಣಿಸದೆ ನಿರಾಸೆಯಾದೆ

ಮನೆ ಬೇಕೆಂದರೆ
ಅದಕ್ಕೊಬ್ಬ ಬ್ರೋಕರ್ ಇರಬೇಕು
ಅವನೇಳಿದ ಹಾಗೆ ನಡೀಬೇಕು
ಸರಿ, ಅವನನ್ನ ಹುಡುಕಿದೆ
‘ಮನೆ ತೋರೋ ಮಹಾರಾಯ’
ಎಂದು ಅವನ ಹೊಗಳಿದೆ

ನನ್ನ ಬರಿಗಣ್ನೆಗೆ ಕಾಣಿಸದ
ಎಲ್ಲಿಯೂ ಬೋರ್ಡ್ ತಗುಲಿ ಹಾಕದ
ಹತ್ತಾರು ಮನೆಗಳ
ತೋರಿದ ಕ್ಷಣದಲಿ
ಒನ್ದೊನ್ದಕು ಒಂದೊಂದು ಕಂಡೀಶನ್
ಒಂದೊಂದು ರೇಟು

ಮೂರು ಸಾವಿರಕೆ ಸಿಂಗಲ್ ರೂಮು
ಆರಕ್ಕೆ ಕಡಿಮೆಯಿಲ್ಲ ಡಬಲ್ ಬೆಡ್‍ರೂಮಿನ ಮನೆಯು
ಒಂದು ತಿಂಗಳ ಬಾಡಿಗೆಯ
ಹಣ ಕೊಡಬೇಕು ನನಗೆ
ಯಾವ ತೊಂದರೆ ಇಲ್ಲದೆ
ಕರಾರು ಮಾಡಿಸಿ ಮನೆ ಕೊಡಿಸುವೆ ನಿಮಗೆ
ಎಂದು ರೇಟು ಹೇಳಿದ ‘ಮಹಾರಾಯ’

ತಕ್ಕ ಮನೆಯೇನೋ ಸಿಕ್ಕಿತು
ಪಕ್ಕದಲ್ಲಿಯೆ ಪಾರ್ಕು-ಗೀಕು
ಎಲ್ಲ ಇದ್ದು ಮನಕೀಗ ಶಾಂತಿ ಇರದಾಗಿದೆ
ಮಾಲೀಕರ ಮನೆಯಲ್ಲಿ ದಿನ ರಾದ್ಧಾಂತ ನಡೆದಿದೆ
ಬೇರೊಂದು ಮನೆಯ ಹೊಸದಾಗಿ
ನಾ ಹುಡುಕಬೇಕಾಗಿದೆ

Ellarigu Ugadi Habbada mattu hosa varshada shubhashayagalu

Posted by: sundaranadu on: March 25, 2009

Ellarigu Ugadi Habbada mattu hosa varshada shubhashayagalu

All articles, poems and writings are written by myself (Sundaranadu) except Kannada SMS and Proverbs. ಇಲ್ಲಿ ಬರೆದಿರುವ ಎಲ್ಲ ಲೇಖನಗಳು, ಕವಿತೆಗಳು, ಬರಹಗಳು (ಕನ್ನಡ ಗಾದೆಗಳು ಮತ್ತು ಏಸ್ಸೆಮ್ಮೆಸ್ಸು ಹೊರತುಪಡಿಸಿ) ನನ್ನ (ಸುಂದರನಾಡು) ಸ್ವಂತದ್ದಾಗಿವೆ. ಸುಂದರನಾಡಿಗೆ ಬಂದು ಹೋದವರು Locations of visitors to this page

ಸುಂದರನಾಡಿನ ಅತಿಥಿಗಳು

  • 12,167