ಶುಕ್ರವಾರ,ದಿನಾಂಕ: 25/07/2008, ಬೆಂಗಳೂರಿನ, ಕರ್ನಾಟಕದ ಇತಿಹಾಸದಲ್ಲಿಯೇ
ಮೊದಲ ಸರಣಿ ಬಾಂಬ್ ಸ್ಪೋಟ ದಾಖಲದ ದಿನ. ಒಂದು ಸಾವಿನೊಂದಿಗೆ,ಕೆಲವು
ಜನ ಗಾಯಗೊಂಡರು. ಇಡೀ ದೇಶಕ್ಕೆ ಇದ್ದಕ್ಕಿದ್ದ ಹಾಗೆ ದಿಗ್ಬ್ರಮೆಯಾಯಿತು.
ವಾರಾಂತ್ಯದ ‘ಮಜ’ ಅನುಭವಿಸಲು ಸಿದ್ಧರಾದವರಿಗೆ ಆಘಾತ. ಕಾಡ್ಗಿಚ್ಚಿನಂತೆ
ಹರಡುತ್ತಿದ್ದ ವದಂತಿಗಳು. ಜನರನ್ನು ಎಚ್ಚರಗೊಳಿಸುವತ್ತ ಮಾಧ್ಯಮಗಳು.
ಅನುಮಾನಾಸ್ಪದವಾಗಿ ಕಂಡು ಬರುವಂತಹ ವಸ್ತುಗಳನ್ನು ಪೊಲೀಸರ
ಗಮನಕ್ಕೆ ತರಬೇಕೆಂದು ಪೊಲೀಸರ, ಮಾಧ್ಯಮದವರ ಮನವಿಯಾಗಿತ್ತು.
ಶನಿವಾರ,ದಿನಾಂಕ: 26/07/2008, ಬೆಂಗಳೂರು ಶುಕ್ರವಾರದ ಘಟನೆಯ
ನಂತರ ಸಹಜ ಸ್ಥಿತಿಗೆ ಮರಳುತ್ತಿತ್ತು. ಕೋರಮಂಗಲದ ‘ಫೋರಮ್ ಮಾಲ್’ ಬಳಿ
ಅಸಹಜವಾದ ವಸ್ತುವೊಂದು ಕಂಡು ಬಂತು. ಅಲ್ಲಿನ ಹತ್ತಿರದ ಅಂಗಡಿಯವನು
ಪೊಲೀಸರಿಗೆ ವಿಷಯ ತಿಳಿಸಲು, ಪೊಲೀಸರು ಜಾಗೃತರಾಗಿ ‘ಬಾಂಬ್ ನಿಷ್ಕ್ರಿಯ
ದಳ’ದೊನ್ದಿಗೆ ಆಗಮಿಸಿದರು. ಫೋರಮ್ಮಿಗೆ ಬರುವ ರಸ್ತೆಗಳನ್ನೆಲ್ಲ ಮುಂಜಾಗ್ರತಾ
ಕ್ರಮವಾಗಿ ಬಂಧ್ ಮಾಡಲಾಯಿತು. ನಮ್ಮ ಹೀರೊ ‘ಸುಕುಮಾರ್’ ಕೂಡ ಈ ‘ಬಾಂಬ್ ನಿಷ್ಕ್ರಿಯ
ದಳ’ದಲ್ಲಿ ಇದ್ದರು.
ನಿಧಾನವಾಗಿ ಹೆಜ್ಜೆ ಇಡುತ್ತ ಸಾಗಿದ ‘ಸುಕುಮಾರ್’, ಆ ಅಸಹಜ ವಸ್ತುವಿನ ಬಳಿ
ಸಾಗಿ, ಅದನ್ನು ಸಜೀವ ಬಾಂಬ್ ಎಂದು ಧೃಡಪಡಿಸಿದರು. ನಂತರ ತಮ್ಮ
ಪ್ರಾಣದ ಹಂಗು ತೊರೆದು ಆ ಬಾಂಬನ್ನು ನಿಷ್ಕ್ರಿಯಗೊಳಿಸುವಲ್ಲಿ ಯಶಸ್ವಿಯಾದರು.
ನೆರೆದವರ ಮನದಲ್ಲಿ ಮಂದಹಾಸ, ಕೇಕೆ, ಕುಣಿತ. ಆ ದಿನದ ನಿಜವಾದ ಹೀರೊ
‘ಸುಕುಮಾರ್’.
ಸರ್ಕಾರ ಇವರ ಸೇವೆಯನ್ನು ಗಮನಿಸಿ ಒಂದು ಲಕ್ಷ ರೂ. ನಗದು ಬಹುಮಾನ
ಘೋಷಿಸಿತು. ಆದರೆ ಆ ಲಕ್ಷ ರೂಪಾಯಿಗಿಂತ ಕೋಟಿ ಹೃದಯದ ಪ್ರೀತಿಯೇ
ಅವರಿಗೆ ಸಂದಿದೆ. ಸುಕುಮಾರ್, ನಿಮ್ಮಂಥ ಧೈರ್ಯವಂತ ಅಧಿಕಾರಿಗಳಿಗೆ
ನನ್ನ ಅಭಿನಂದನೆಗಳು.